ಮೂಡಿಗೆರೆ :06.08.2026.ಶುಕ್ರವಾರ.
ನಿವೇಶನ ಹಾಗೂ ಸ್ಮಶಾನ ಭೂಮಿಗಾಗಿ ಕುನ್ನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಮೂಡಿಗೆರೆ, ಆ. 7: ಮೂಡಿಗೆರೆ ತಾಲೂಕಿನ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಹಳ್ಳಿ ಗ್ರಾಮದ ಕೆಲ್ಲೂರು, ಜಿ. ಕೆಲ್ಲೂರು, ಕೃಷ್ಣಪ್ಪನಗರ, ಅಂಬೇಡ್ಕರ್ ನಗರ ಹಾಗೂ ಕುನ್ನಹಳ್ಳಿ ಗ್ರಾಮದ ನಿವೇಶನ ರಹಿತ ಮತ್ತು ಭೂಮಿ ರಹಿತ ನಿವಾಸಿಗಳು ನಿವೇಶನ ಹಾಗೂ ಸ್ಮಶಾನ ಭೂಮಿ ಒದಗಿಸುವಂತೆ ಆಗ್ರಹಿಸಿ ಗುರುವಾರ ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರ ಪ್ರಕಾರ, ಕೆಲ್ಲೂರು ಗ್ರಾಮದ ಸರ್ವೆ ನಂ. 82ರಲ್ಲಿ ಖಾಲಿ ಇರುವ ಸರ್ಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ಮಂಜೂರು ಮಾಡುವ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಸಭಾ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಆ ಭೂಮಿಯನ್ನು ಬೇರೆ ಗ್ರಾಮದ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅದೇ ಸರ್ವೆ ಸಂಖ್ಯೆಯಲ್ಲಿ ಸುಮಾರು 30 ವರ್ಷಗಳ ಹಿಂದೆ ಸರ್ಕಾರವು ಒಂದು ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದರೂ, ಪ್ರಭಾವಿ ವ್ಯಕ್ತಿಗಳು ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ, ಇದುವರೆಗೆ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಭೂಮಿಯನ್ನು ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಕುನ್ನಹಳ್ಳಿ ಗ್ರಾಮದ ಸರ್ವೆ ನಂ. 1 ಹಾಗೂ ಮೂಡಿಗೆರೆ ಸರ್ವೆ ನಂ. 289ರಲ್ಲಿ ಇರುವ ಖಾಲಿ ಸರ್ಕಾರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರ ಸೌಲಭ್ಯಕ್ಕಾಗಿ ಬಳಸಬೇಕು. ಜೊತೆಗೆ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಭೂಮಿಯ ಮೇಲಿನ ಒತ್ತುವರಿಯನ್ನು ತೆರವುಗೊಳಿಸಿ ಸ್ಮಶಾನಕ್ಕಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮೂಡಿಗೆರೆಯ ವಿವಿಧ ಸಂಘಟನೆಗಳ ಮುಖಂಡರಾದ ಭೂ ಹೋರಾಟಗಾರ ಹಾಗೂ ಸಾಮಾಜಿಕ ಹೋರಾಟಗಾರ ರಮೇಶ್ ಕೆಳಗೂರು, ಎಸ್‌ಸಿ/ಎಸ್‌ಟಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ದೇಜಪ್ಪ ಹೊಯ್ಸಳ, ಹರೀಶ್ ಸಬ್ಬೇನಹಳ್ಳಿ, ಟಿಯುಸಿಐ ಕಾರ್ಮಿಕ ಸಂಘಟನೆಯ ಕೃಷ್ಣಪ್ಪ ಬಿಳುಗುಲು, ಶೇಖರ್ ಹೊಸಹಳ್ಳಿ, ಲ್ಯಾಂಪ್ಸ್ ಅಧ್ಯಕ್ಷ ಕೃಷ್ಣ ಕುಂದೂರು, ಶಿವಪ್ಪ ಕಸ್ಕೆಬೈಲು, ಗಿರೀಶ್ ಮಾಗರಹಳ್ಳಿ, ಜಗದೀಶ್ ಕಾರ್ ಬೈಲು, ನಾಗೇಶ್ ಹೊಸಹಳ್ಳಿ, ಪ್ರತಾಪ್ ಮೂಡಿಗೆರೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಹಾಗೆಯೇ ಕುನ್ನಹಳ್ಳಿ ಗ್ರಾಮದ ನಿವೇಶನ ಹೋರಾಟ ಸಮಿತಿಯ ಅಧ್ಯಕ್ಷ ಹರೀಶ್ ಕೆಲ್ಲೂರು, ಗೌರವಾಧ್ಯಕ್ಷರಾದ ಪೂವಪ್ಪ ಹಾಗೂ ರಮೇಶ್ ಕೆಲ್ಲೂರು, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಜನಾರ್ಧನ, ಖಜಾಂಚಿ ಚಂದ್ರೇಶ್ (ಅಂಬೇಡ್ಕರ್ ನಗರ), ಭೀಮ್ ಆರ್ಮಿಯ ತಾಲೂಕು ಅಧ್ಯಕ್ಷ ವಿಶ್ವ (ಕೃಷ್ಣಪ್ಪನಗರ), ಸುಂದರ, ನಾರಾಯಣ, ಐತಪ್ಪ ಸೇರಿದಂತೆ ಕೆಲ್ಲೂರು, ಜಿ. ಕೆಲ್ಲೂರು, ಕೃಷ್ಣಪ್ಪನಗರ, ಅಂಬೇಡ್ಕರ್ ನಗರ, ಕುನ್ನಹಳ್ಳಿ ಹಾಗೂ ಹೊಸನಗರದ ನೂರಾರು ನಿವೇಶನ ರಹಿತ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ನಿವೇಶನ ಮತ್ತು ಸ್ಮಶಾನ ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.